ವರದಿ : ಡಿ.ವಿ ರಮೇಶ್ ಕುಮಾರ್
ಚೇಳೂರು, ಡಿಸೆಂಬರ್ 15 : ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಲಾ ಮಕ್ಕಳು ಮಳೆಗಾಲದಲ್ಲಿ ಪರದಾಡುವಂತಾಗಿದೆ. ಮೂರು ದಿನಗಳಿಂದ ಜಿಟಿಜಿಟಿ ಮಳೆ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಕಟ್ಟಡ ಸೋರುತ್ತಿದೆ. ಸರಕಾರಿ ಶಾಲೆಗಳು ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಖಾಸಗಿ ಶಾಲೆಗಳಿಗೆ ವರದಾನವಾಗಿ ಪರಿಣಮಿಸುತ್ತಿದೆ.
ತಾಲೂಕಿನ ಕೊತ್ತ ಕೋಟಲ್ ಪಲ್ಲಿ ಸರಕಾರಿ ಶಾಲೆಯಲ್ಲಿ 1 ರಿಂದ 5 ನೆ ತರಗತಿ ವರೆಗೂ ಒಟ್ಟು 15 ಮಕ್ಕಳಿದ್ದು. ಕಟ್ಟಡ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸೋರುತ್ತಿದ್ದು, ಬಹುತೇಕ ಶಿಥಿಲಾವಸ್ಥೆಗೆ ತಲುಪಿ ಮಕ್ಕಳ ಪಾಠ ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ. ಚಾವಣಿ, ಗೋಡೆ ಹೀಗೆ ಕಟ್ಟಡದ ಬಹುಭಾಗ ಮಳೆ ನೀರಿನಿಂದ ನೆನೆದು ದುರ್ಬಲವಾಗಿದೆ.ಸರಕಾರ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರಿ ಶಾಲೆ ಆರಂಭ ಮಾಡಿದೆ. ಆದರೆ, ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿ ಶಿಕ್ಷಣ ನೀಡುವ ಕೆಲಸ ಮಾಡುತ್ತಿಲ್ಲ. ಸರಿಯಾಗಿ ಶಿಕ್ಷಕರು ಬಾರದ ಕಾರಣ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡದೆ ಅವಘಡ ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಈ ಕೂಡಲೇ ದುರಸ್ತಿ ಮಾಡಬೇಕೆಂದು ಗ್ರಾಮದ ಮಹೇಶ್ ಎನ್ನುವರು ಒತ್ತಾಯಿಸಿದರು.
Tags
ಜಿಲ್ಲಾ ಸುದ್ದಿಗಳು