UDAYAVANI NEWS
ಮಸ್ಕಿ,ಜನವರಿ 13 : ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯ ಅಂಗವಾಗಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಡಾ.ಬಿ.ಆರ್ ಅಂಬೇಡ್ಕರ್ ಹುಟ್ಟು ಹಬ್ಬದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿದೆ. ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದವರಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ತಿಳಿಸಿದ್ದಾರೆ.
ಈ ಬಗ್ಗೆ ಸರ್ಕ್ಯೂಟ್ ಹೌಸ್ ನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯೂ ಪತ್ರಿಕಾ ಹೇಳಿಕೆ ನೀಡಿದ ಅವರು, "ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಮೊದಲ ಮೂವರು ವಿಜೇತರಿಗೆ ಬಹುಮಾನ ಮೊತ್ತ ಹೆಚ್ಚಳ ಮಾಡಲಾಗಿದೆ. ಪ್ರಥಮ ಬಹುಮಾನ 5 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ 2.5 ಲಕ್ಷ ರೂಪಾಯಿ, ತೃತೀಯ ಬಹುಮಾನ 1 ಲಕ್ಷ ರೂಪಾಯಿ ಇರಲಿದೆ" ಎಂದು ತಿಳಿಸಿದರು.
"ಅಷ್ಟೇ ಅಲ್ಲದೆ ಈ ಬಾರಿ ಜಿಲ್ಲಾ ಮಟ್ಟದಲ್ಲಿಯೂ 3 ಜನ ರ್ಯಾಂಕ್ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಪ್ರಥಮ ಬಹುಮಾನ 15 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 10 ಸಾವಿರ ರೂಪಾಯಿ, ತೃತೀಯ ಬಹುಮಾನ 5 ಸಾವಿರ ರೂಪಾಯಿ ಇರಲಿದೆ" ಎಂದು ಹೇಳಿದರು.
"ಪರೀಕ್ಷೆಗೆ ಜನವರಿ 7ರಿಂದ ನೋಂದಣಿ ಆರಂಭಿಸಲಾಗಿದ್ದು, ಫೆಬ್ರುವರಿ 28ರಂದು ಕೊನೆಯ ದಿನಾಂಕವಾಗಿರುತ್ತದೆ. 15 ರಿಂದ 35 ವರ್ಷ ವಯೋಮಾನದ ವಿದ್ಯಾರ್ಥಿಗಳು, ಯುವಜನರು ವೆಬ್ ಸೈಟ್ https://thedvp.org/registration/- ಭೇಟಿ ನೀಡಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9380678859 ಅನ್ನು ಸಂಪರ್ಕಿಸಬಹುದು" ಎಂದು ಅವರು ಮಾಹಿತಿ ನೀಡಿದ್ದಾರೆ.
ಮಸ್ಕಿ ತಾಲೂಕ ಸಂಚಾಲಕ ಮೌನೇಶ ತುಗ್ಗಲದಿನ್ನಿ ಮಾತನಾಡಿ ನಾಡಿನ ಎಲ್ಲಾ ಸಮುದಾಯಗಳ ವಿದ್ಯಾರ್ಥಿ ಯುವಜನರಿಗೆ ಅವಕಾಶ ಇರಲಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಪ್ರಶ್ನೆಗಳನ್ನೊಳಗೊಂಡ ಸ್ಪರ್ಧಾ ಪರೀಕ್ಷೆ ನಡೆಸುವ ಮೂಲಕ ದಲಿತ ವಿಧ್ಯಾರ್ಥಿ ಪರಿಷತ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಅವರು ಹೇಳಿದರು.
ಕಳೆದ ಬಾರಿ ಈ ವಿನೂತನ ಪರೀಕ್ಷೆಯನ್ನು ನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಸಲಾಗಿದೆ. ಈಗಾಗಲೇ ಹೋದ ವರ್ಷ ನಡೆದ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗಿದ್ದು, ವಿಜೇತರಿಗೆ ಇದೇ ತಿಂಗಳ 31 ರಂದು ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಸನ್ಮಾನಿಸಲಾಗುತ್ತಿದೆ. ಬಹುಮಾನ ವಿಜೇತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.thedvp.org ಗೆ ಭೇಟಿ ನೀಡಬಹುದು ಎಂದು ತಿಳಿಸಿದರು.
ಇದೇ ವೇಳೆ ಹಿರಿಯ ಸಾಮಾಜಿಕ ಹೋರಾಟಗಾರ ಮತ್ತು ಕವಿಗಳಾದ ಸಿ. ದಾನಪ್ಪ ನಿಲೋಗಲ್ ಮಸ್ಕಿ, ದೊಡ್ಡಪ್ಪ ಮುರಾರಿ, ಪರೀಕ್ಷೆಯ ಪೋಸ್ಟರ್ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ವಿರೂಪಾಕ್ಷಿ ಬಳಗಾನೂರ, ಶಿವರಾಜ್ ಕೆಲ್ಲೂರು, ಖಾಸಿಂ,ಪ್ರಭು, ನಿರುಪಾದಿ ಪರಾಪೂರ, ಅಯ್ಯಪ್ಪ, ರಶೀದ್ ಬನ್ನಿಗನೂರು, ಮಲ್ಲಿಕಾರ್ಜುನ ಗೋನ್ವಾರ್, ರವಿಕುಮಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು