UDAYAVANI NEWS
ಬೆಂಗಳೂರು ಡಿಸೆಂಬರ್ 18 : ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಮೀಸಲಾತಿ ಹೋರಾಟ ಎಲ್ಲಾ ದುಡಿಯುವ ಸಮುದಾಯಗಳನ್ನು ಒಳಗೊಳ್ಳಬೇಕು ಎಂದು ಮುಖಂಡರು ಪ್ರತಿಪಾದಿಸಿದ್ದಾರೆ.
ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿದ ಹೋರಾಟಗಾರರು ಮೀಸಲಾತಿ ಜಾರಿಯಾಗುವ ತನಕ ಚಳುವಳಿ ನಿಲ್ಲಿಸುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು. ಸದಾಶಿವ ಆಯೋಗದ ವರದಿಯ ಗಂಟನ್ನು ಬಿಚ್ಚಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲೇಬೇಕು ಇಲ್ಲವಾದರೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಲೇಖಕಿಯರ ಪ್ರತಿನಿಧಿಗಳು ಚಳುವಳಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು ಈ ವೇಳೆ ಮಾತನಾಡಿದ ಲೇಖಕಿ ದು. ಸರಸ್ವತಿ, ಒಳ ಮೀಸಲಾತಿ ಹೋರಾಟದಲ್ಲಿ ಪೌರಕಾರ್ಮಿಕರು ಸೇರಿದಂತೆ ಎಲ್ಲ ದುಡಿಯು ವರ್ಗದವರನ್ನು ಒಳಗೊಳ್ಳಬೇಕು. ಮೀಸಲಾತಿ ಹೋರಾಟದ ಹುಟ್ಟಿಗೆ ಕಾರಣರಾದವರು ಆಂಧ್ರಪ್ರದೇಶದ ಎಂ.ಪಿ ಸುಧಾಲಕ್ಷ್ಮಿ ಎಂದು ಸ್ಮರಿಸಿದರು.
ಒಳ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಮಹಿಳೆಯರು ಪಾಲು ಹೆಚ್ಚಿರಬೇಕು ಮಹಿಳೆಯರಿಲ್ಲದೆ ಯಾವುದೇ ಹೋರಾಟ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದಾರೆ.
ಹೀಗಾಗಿ ಅವಳ ಮೀಸಲಾತಿ ಹೋರಾಟದಲ್ಲಿಯೂ ಮಹಿಳೆಯರು ಹೆಚ್ಚಾಗಿ ಇರಬೇಕೆಂದು ಸರಸ್ವತಿ ತಿಳಿಸಿದರು.
ಈ ವೇಳೆ ಲೇಖಕಿಯರಾದ ಗಂಗಮ್ಮ, ಗೌರಿ, ಶೋಭಾ, ಸುಜಾತ,ನಾಗಮಣಿ ಮುನಿಯಪ್ಪ, ಅಶ್ವಿನಿ, ದಲಿತ ಮುಖಂಡರಾದ ಡಾಕ್ಟರ್. ನಾಗೇಶ್, ಎನ್.ವೆಂಕಟೇಶ್, ಮಾರಪ್ಪ,ಕೇಶವಮೂರ್ತಿ, ದೀಪಾಂಜಲಿ ನಗರ ವೆಂಕಟೇಶ್, ಬಸವರಾಜ್ ಕವಿತಾಳ, ಹೆಣ್ಣೂರು ಶ್ರೀನಿವಾಸ್, ಹುಲಿಕುಂಟೆ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ರಾಜ್ಯ ಸುದ್ದಿಗಳು