UDAYAVANI NEWS
ಮಸ್ಕಿ, ಮಾರ್ಚ್ 10 : ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾನಬಾಳ ಗ್ರಾಮದ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಪಾಟೀಲ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಂದು ಅನೇಕ ಮಹಿಳೆಯರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಮಹಿಳೆ ರಾಷ್ಟ್ರಪತಿಯಾಗಿದ್ದಾರೆ. ತಮ್ಮ ಸ್ವ ಸಾಮರ್ಥ್ಯದ ಮೂಲಕ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದ ಮನೆಗೆಲಸಕ್ಕೆ ಸೀಮಿತವಾಗಿದ್ದ ಅವರು ಇಂದು ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವುದರ ಜತೆಗೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನರೇಗಾದಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಈ ವರ್ಷ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಏರ್ಪಡಿಸಲಾಗಿದೆ. ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಶೇ. 50 ರಿಂದ ಶೇ. 60 ಕ್ಕೆ ಹೆಚ್ಚಬೇಕಿದೆ. ಇದು ಸಕಾರವಾಗಲು ಎಲ್ಲರ ಸಹಕಾರ ಅಗತ್ಯ ಎಂದರು.
ಈ ವೇಳೆ ಕೆಎಚ್ ಪಿಟಿ ಸಹಕಾರದೊಂದಿಗೆ ಮಹಿಳಾ ಕೂಲಿಕಾರರ ಆರೋಗ್ಯ ಉಚಿತ ತಪಾಸಣೆ ಶಿಬಿರ ಜರುಗಿತು. ಮೇಟಿಗಳಿಗೆ ಟಿ ಶರ್ಟ್, ಕ್ಯಾಪ್ ವಿತರಿಸಲಾಯಿತು. ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಅಂಕುಶದೊಡ್ಡಿ ಗ್ರಾಪಂ ಅಧ್ಯಕ್ಷೆ ಸುಂದರಮ್ಮ, ಉಪಾಧ್ಯಕ್ಷೆ ದೊಡ್ಡ ಬಸ್ಸಮ್ಮ, ಸದಸ್ಯರಾದ ರೇಣುಕಮ್ಮ, ಚಂದ್ರಮ್ಮ, ಕೆಎಚ್ ಪಿಟಿ ತಾಲೂಕು ಸಂಯೋಜಕರಾದ ಹನುಮಂತು, ನರೇಗಾ ತಾಂತ್ರಿಕ ಸಂಯೋಜಕರಾದ ಶಿವಲಿಂಗಯ್ಯ ಹಿರೇಮಠ, ತಾಂತ್ರಿಕ ಸಹಾಯಕ ಇಂಜಿನಿಯರ್ ಮಹೇಂದ್ರ, ಐಇಸಿ ಸಂಯೋಜಕ ಸತೀಶ್, ಬಿಎಫ್ಟಿ ಸಣ್ಣ ವಿರುಪಣ್ಣ, ಸ್ವ ಸಹಾಯ ಗುಂಪಿನ ಸದಸ್ಯರು ಇದ್ದರು.
Tags
ಜಿಲ್ಲಾ ಸುದ್ದಿಗಳು