UDAYAVANI NEWS
ಕೊಟ್ಟೂರು, ಫೆಬ್ರುವರಿ 18 : ಕೊಟ್ಟೂರಿನಲ್ಲಿ ಲಕ್ಷಾಂತರ ಭಕ್ತಾದಿಗಳಸಮ್ಮುಖದಲ್ಲಿ ಶ್ರೀಗುರು ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಗುರುವಾರ ಸಂಜೆ ನೆರವೇರಿತು.ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆ ವತಿಯಿಂದ ಕೊಟ್ಟೂರಿನಲ್ಲಿ ಶ್ರೀಗುರು ಬಸವೇಶ್ವರ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ಕೈಗೊಳ್ಳಲಾಯಿತು.
ಫೆ.12ರಿಂದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿದ್ದವು. ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಇಲಾಖೆಯ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. ಜಾತ್ರಾ ಮಹೋತ್ಸವ 5ನೇ ದಿನವಾದ ಗುರುವಾರ ರಥೋತ್ಸವ ಅಂಗವಾಗಿ ತೇರನ್ನು ಅಲಂಕಾರಗೊಳಿಸಲಾಗಿತ್ತು.
ಮೇದಾರ ಸಮಾಜದಿಂದ ರಥದ ಅರ್ಧವೃತ್ತದ ಜಲ್ಲಿಯನ್ನು ನಿರ್ಮಿಸಲಾಗಿತ್ತು. ಆಯಾಗಾರರಿಂದ ರಥದ ಅಂಕಣವನ್ನು ಕಟ್ಟಿ, ಪ್ರತಿ ಅಂಕಣಕ್ಕೂ ವಿವಿಧ ಬಣ್ಣಗಳ ಬಟ್ಟೆಯಿಂದ ಅಲಂಕಾರ ಕೈಗೊಳ್ಳಲಾಗಿತ್ತು.
ಸೂರ್ಯಾಸ್ತದ ಸಮಯದಲ್ಲಿ ನಂದಿಕೋಲನ್ನು ಹಿಡಿದು ರಥದ ಸುತ್ತ ಕುಣಿಯುತ್ತ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು.
ಪಲ್ಲಕ್ಕಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಶಿವಪ್ರಕಾಶ ಕೊಟ್ಟೂರು ಸ್ವಾಮೀಜಿ ಭಕ್ತಾದಿಗಳತ್ತ ಕೈಬೀಸಿ ತೇರಿನಲ್ಲಿ ಆಸೀನರಾದರು. ನಂತರ ಪಲ್ಲಕ್ಕಿಯಿಂದ ಶ್ರೀಗುರು ಬಸವೇಶ್ವರ ಸ್ವಾಮಿಯನ್ನು ತೇರಿನಲ್ಲಿ ಪ್ರತಿಷ್ಟಾಪಿಸಿ ಭಕ್ತರ ಸಮ್ಮುಖದಲ್ಲಿ ತೇರನ್ನು ಎಳೆಯಲಾಯಿತು.
ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆ ಒದಗಿಸಲು ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಅವರು ಜಾತ್ರಾ ಸ್ಥಳದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದರು.
Tags
ಜಿಲ್ಲಾ ಸುದ್ದಿಗಳು